top of page
ಶಿಶುನಾಳ
ಸಂತ ಶರೀಫರ ಜನಪ್ರಿಯ ಪದಗಳು

 

೧.ಬೋಧ  ಒಂದೇ

ಬೋಧ ಒಂದೇ ಬ್ರಹ್ಮನಾದ ಒಂದೇ

                                                    ಸಾಧನ ಮಾಡುವ ಹಾದಿ ಒಂದೇ                                              ||ಪಲ್ಲ||

                                               ಆದಿ ಪದ ಒಂದೇ                                                       ||ಅನುಪಲ್ಲ||

 

ಬಿಂದು ಒಂದೇ ನಿಜಾನಂದ ಒಂದೇ

ತಂದೆ ಸದ್ಗುರು ಗೋವಿಂದಗ ಒಂದೇ

ಅ೦ದಿಗಿ೦ದಿಗೊಂದೇ

 

ದೋಷ ಒಂದೇ ನೀರ್ ದೋಷ ಒಂದೇ

ಶಿಶುನಾಳಧೀಶನ ಭಾಷೆ ಒಂದೇ

ಭವ ನಾಶ ಒಂದೇ

 

 

 

 

೦೨.ಶ್ರೀ ಗುರು ಮಂತ್ರ

ಶ್ರೀಗುರು ಮಂತ್ರವ

ರಾಗದಿ ನುತಿಸಲು

                                                         ಬೋಧ ಸಂಪದ ಸುಖವಾಗುವದೋ                                                 ||ಪಲ್ಲ||

 

ಮಾಜದೆ ಮಂತ್ರದ

ಮೊದಲಕ್ಷರವ

ತೇಜಿಸುತಲಿ ನಿತ್ಯ ಜಪಿಸುವದೋ

           

ಬಿಡದೆರಡಕ್ಷರ 

ನಡುವಿನ ಶೂನ್ಯದಿ

ದ್ರಡವಿಡಿದಾತ್ಮದಿ ನುತಿಸುವದೋ

 

ಬರೆದು ಮೂರಕ್ಷರ

ಕರುಣ ಸೇವಿಸಿದರೆ

ಜನನ ಮರಣ ಭಯ ನೀಗುಹುದೋ

 

ನೀ ಕಲಿ ಸುಮ್ಮನೆ

ನಾಲ್ಕು ಅಕ್ಷರಗಳ

ಬೇಕೆನಿಸಿದ ವಸ್ತು ಸಿಗುತಿಹುದೋ

 

ಶಿಶುನಾಳಧೀಶನ

ಹೆಸರಿನೈದಕ್ಷರ

ಹಸನಾಗಿ ಭಜಿಸಲಹುದೆನಿಸುವದೋ

 

 

 

೦೩.ದೊರಕಿದಾ ಗುರು

                                                                    ದೊರಕಿದಾ| ಗುರು| ದೊರಕಿದಾ                                                            ||ಪಲ್ಲ||

ಪರಮಾನಂದ ಬೋಧ

ಅರುವಿನೊಳಗೆ ಬಂದು

                                                                         ದೊರಕಿದಾ| ಗುರು| ದೊರಕಿದಾ                                                         ||ಅನುಪಲ್ಲ||

 

ಕರಪಾತ್ರೆ ಪಿಡಿದು ಈ

ನರ ಶರೀರದಿ ತನ್ನ

ರಿವು ತನಗೆ ತೋರಿ

ಪರಮ ನಂಬುಗೆಯಲಿ

ದೊರಕಿದಾ| ಗುರು| ದೊರಕಿದಾ

 

ಹಿಂದೆ ಜನ್ಮಾ೦ತರ

ಒಂದು ಉಳಿಯದಂತೆ

ಬಿಂದು ವಸ್ತುವಿನೋಳು

ಚಂದದಿಂದಲಿ ಬಂದು

ದೊರಕಿದಾ| ಗುರು| ದೊರಕಿದಾ

 

ಶಿಶುನಾಳಧೀಶ,

ಪ್ರಕಾಶ ಗೋವಿಂದನ

ಅಸಮ ತೇಜೋ ರೂಪ

ಕಿರಣದಿಂದಲಿ ಬಂದು

ದೊರಕಿದಾ| ಗುರು| ದೊರಕಿದಾ

 

 

 

೦೪.ಸದ್ಗುರು ಸಾಕಿದ ಮದ್ದಾನಿ

ಸದ್ಗುರು ಸಾಕಿದ ಮದ್ದಾನಿ ಬರುತಿದೆ
                                                                                     ಎದ್ದು ಹೋಗಿರಿ ಇದ್ದ ನಿಂದಕರು                                                                            ||ಪಲ್ಲ||

ಬಿದ್ದು ಈ ಭವದೊಳು ಒದ್ದಾಡು ಜನರನ್ನು
ಉದ್ಧಾರ ಮಾಡುತ ಬರುತಿದೆ ||೧||

ಆಕಾಶ ನೋಡುತ ವಾಯುವ ನುಂಗುತ
ಝೇಂಕರಿಸುತಲದು ಬರುತಿದೆ ||೨||

ಅಷ್ಟಮದಗಳೆಂಬೊ ಕೆಟ್ಟ ನೀಚರನ್ನು
ಸಿಟ್ಟಿಲೆ ಸೀಳುತ ಬರುತಿದೆ ||೩||

ಪ್ರಣವ ಸ್ವರೂಪವ ಅನುದಿನ ನೋಡುತ
ಘನಸುಖದಲಿ ಅದು ಬರುತಿದೆ ||೪||

ಮನವ ಶಿಶುನಾಳಧೀಶನೊಳು ಮಗ್ನವ ಮಾಡಿ
ಚಿನುಮಯಾತ್ಮಕವಾಗಿ ಬರುತಿದೆ ||೫||

 

 

 

೦೫.ನಡಿಯೋ ದೇವರ ಚಾಕರಿಗೆ

ನಡಿಯೋ ದೇವರ ಚಾಕರಿಗೆ ಮುಕ್ತಿ-
                                  ಗೊಡೆಯ ಖಾದರಲಿಂಗ ನೆಲಸಿರ್ಪ ಗಿರಿಗೆ                    ||ಪ||

ಎಡಬಲಕೆ ನೋಡುದಲೆ ಷಣ್ಮುಖಿ

ಒಡಲೊಳಗೆ ತನ್ಮನವ ಸೇರಿಸಿ
ಕಡು ವಿಷಯ ಕರುಣಾಬ್ದಿಗಳ ಕೈ
                                         ಹೊಡೆದು ಮುಂದಕೆ ಒಡುತೋಡುತ                        ||ಅ.ಪ.||

ಬಯಲೊಳು ಬಯಲು ಪುಟ್ಟಿಸಿದಾ ನಿರ್‍-
ಬಯಲಿನೊಳಗೆ ತನ್ನಾಲಯವ ಕಟ್ಟಿಸಿದಾ
ಭವನಿವಾರಣ ಭಕ್ತರಕ್ಷಕ
ಅಹುದೆನುತ ನಿಶ್ಚಯಿಸಿ ಮನದೊಳು
ತವಕ ತೂರ್ಯದಿ ಲಕ್ಷದಿಂದಲಿ
                                ಭವಸಮುದ್ರವ ದಾಂಟು ದಾಟುತ                            ||೧||

ಆ ಮಹಾಮಹಿಮ ಪೇಳಿದನು ಈ
ಭೂಮಿಯೋಳ್ ಹುಲಗೂರ ಗ್ರಾಮಕಿಳಿದನು
ನಾಮ ರೂಪದಿ ಕ್ರಿಯಾ ಕಲಾಪದಿ
ಸೀಮೆಯನು ಗೆಲಿದಂಥ ಸ್ವಾಮಿಯ
ನೇಮ ಹಿಡಿದಾತ್ಮದಿ ಭಜಿಸುತ
                                ಕಾಮ ಕ್ರೋಧವ ಕಾಲಿಲೊದೆಯುತ                        ||೨||

ಜೀವ ಪರಮರೊಂದುಗೂಡಿ ಅನು
ಭಾವದಿ ಸಾಯ್ಯುಜ್ಯ ಪದವಿಯ ಬೇಡಿ
ಕಾಯಿ ಸಕ್ಕರಿ ಊದನೀಡುತ
ಜಿವ್ಹೆಯೊಳು ಗುರು ಮಂತ್ರವ ಜಪಿಸುತ
ಠಾವು ಶಿಶುವಿನಾಳಿಂದ ಹೊರಟ

                               ಮಾಯೆಯನು ಮುರಿದೊತ್ತಿ ಮೌಜಿಲೆ                        ||೩||
   

 

೦೬.ಪದವ ಬ್ಯೇಗನೇ ಕಲಿ ಕಲಿ

ಪದವ ಬ್ಯೇಗನೇ ಕಲಿ ಕಲಿ| ಶಿವ|

                                                                 ಶರಣರ ಹೃದಯದಲಿ ಕೀಲಿ ಕೀಲಿ                                                        ||ಪಲ್ಲ||

 

ಅಡಿಗನ ಪ್ರಾಸಕೆ ದೊರಕದ ಪದವು

ನುಡಿ ಶಬ್ದಕೆ ನಿಜ  ನಿಲುಕದ ಪದವು

ಕಡುಬಟ್ಟಿನ ಕೈತಾಳ ಮಾತ್ರೆಯ

                                                            ಬಡಿವಾರಕೆ ಬಯಲಾಗದ ಬ್ರಹ್ಮನ ಪದವು                                              ಪದವ...

 

ಗಣ ನೇಮದ ಗುಣಗೆಡಿಸುವ ಪದವು

ತುಣುಕು ಶಾಸ್ತ್ರಕೆ ಮಣಿಯದ ಪದವು

ಗುಣಿಸಿಕೊಂಡು ಸಂಗೀತ ಸ್ವರ೦ಗಳ 

                                                             ಎಣಿಸಿ ಎಣಿಸಿ ಕುಣಿಸ್ಯಾಡುವ ಪದವು                                                    ಪದವ...

 

ಲಯ ಪ್ರಳಯಕೆ ಒಳಗಾಗದ ಪದವು

ನಿಲಯದೊಳು ನಿಜ ವೆನಿಸುವ ಪದವು

ಒಲಿಸಿಕೊಂಡು ಶಿಶುನಾಳಧೀಶನು

                                                                ಸುಲಭದಿಂದ ಎನಗ್ಹೇಳಿದ ಪದವು                                                      ಪದವ...

 

 

 

೦೭.ಪದವ ಬರೆದು ಕೊಟ್ಟೆ ನಿನಗೆ

ಪದವ ಬರೆದು ಕೊಟ್ಟೆ ನಿನಗ

                                                  ಅದನ್ನರಿತು ಹಾಡು ನಿನ್ನೊಳಗ                                         ||ಪಲ್ಲ||

ಸದಮಲ ಜ್ಯಾನದಿ ಕುದಿವುಕ್ಕಿ ಬರುವಾಗ

                                               ಚದುರನಾದರೆ ತಿಳಿ ಹೃದಯಕಮಲದೊಳು                             ||ಅನುಪಲ್ಲ||

 

ಅಡಿಪ್ರಾಸ ಗುರುಲಘು ಶೂನ್ಯ| ಕಟ್ಟ-

ಕಡೆಯರೆಡಕ್ಷರ ಕನ್ಯಾ

ಸಡಗರ ತಾಳಲಯ೦ಗಳು ಕಡೆಗಿಟ್ಟು

ನುಡಿ ಶಬ್ದ ಗುರುವಿನ ಬಿಡದೆ

ಪದವ ಬರೆದು.....

 

ಹಸನಾದೈದಕ್ಷರ ಒಂದು| ಅದರಮೃತ

ರಸವನು ಸವಿದು

ವಸುಧೆಯೊಳ್  ಶಿಶುನಾಳಧೀಶನ ಕರುಣದಿ

ಉಸುರಿದ  ಮಾತು ಹುಸಿಯಲ್ಲ ನೋಡಿಕೋ

ಪದವ ಬರೆದು....

 

 

 

 

೦೮.ಹಾವು ತುಳಿದೇನೇ

ಹಾವು ತುಲಿದೆನೇ| ಮಾನಿನಿ

ಹಾವು ತುಳಿದೆನೇ

 

ಹಾವುತುಳಿದು ಹಾರಿ ನಿಂತೆ;

ಜೀವ ಕಳವಲಿಸಿತು ಗೆಳತಿ

ದೇಹತ್ರಯದ  ಸ್ಮೃತಿಯ  ತಪ್ಪಿ

ದೇವಾ ನಿನಗೆ ಗತಿಯು ಎಂದು

ಹಾವು ತುಳಿದೆನೇ....

 

ಹರಿಗೆ ಹಾಸಿಗೆಯಾದ ಹಾವು

ಹರನ ತೋಳಿನೊಳಿರುವ ಹಾವು

ಧರೆಯ ಹೊತ್ತು ಮೆರೆವ ಹಾವಿನ

ಶಿರವ ಮೆಟ್ಟಿ ಶಿವನ ದಯದಿ

ಹಾವು ತುಳಿದೆನೇ....

 

ಬೋಧನಂದವಾಗಿ ಬರಲು

ದಾರಿಯೊಳಗೆ ಮಲಗಿ ಇರಲು

ಪಾದದಿಂದ ಪೊಡೆವಿಗೊತ್ತಿ

ನಾದಗೊಳಿಸಿತು ನಿಜದಿ ನೋಡಿ

ಹಾವು ತುಳಿದೆನೇ....

 

ಕಾರಡಗಿ ಊರ ಹೊರಗೆ

ದಾರಿಕಟ್ಟಿ ತರುಬಿದಂಥ

ಘೋರತರದ ಉರಗ ಅದರ

ಕ್ವಾರಿ ಹಲ್ಲು ಮುರಿವ ತೆರದಿ

ಹಾವು ತುಳಿದೆನೇ....

 

ಸತ್ಯ ಶಿಶುವಿನಾಳಧೀಶನ

ಉತ್ತಮನಾದ ಸೇವಕನಿಗೆ

ಕತ್ತಲೊಳು ಬಂದು ಕಾಲಿಗೆ

ಸುತ್ತಿಕೊಂಡಿತು  ಸಣ್ಣ ನಾಗರ

ಹಾವು ತುಳಿದೆನೇ....

 

 

 

೦೯.ಸೋರುತಿಹುದುಮನೆಯ ಮಾಳಿಗಿ

ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗಿ

ಸೋರುತಿಹುದು ಮನೆಯ ಮಾಳಿಗಿ
ದಾರು ಗಟ್ಟಿ ಮಾಳ್ಪರಿಲ್ಲ
ಕಾಳ ಕತ್ತಲೆಯೊಳಗೆ ನಾನು
ಮೇಲಕೇರಿ ಮೆಟ್ಟಲಾದೆ

ಸೋರುತಿಹುದು ಮನೆಯ ಮಾಳಿಗಿ...

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರುಕು ಚಪ್ಪರ ಜೀರಗಿಂಡಿ
ಮೇಲಕೇರಿ ಮೆಟ್ಟಲಾರದೆ

ಸೋರುತಿಹುದು ಮನೆಯ ಮಾಳಿಗಿ...

ಕರಕಿ ಹುಲ್ಲು ಕಸವು ಹುಟ್ಟಿ
ಹಲವು ಸಾಲು ಇರಬಿ ಮುತ್ತಿ
ಜಲದ ಭರದಿ ಸರಿಯೆ ಮಣ್ಣು
ಒಳಗೆ ಹೊರಗೆ ಏಕವಾಗಿ

ಸೋರುತಿಹುದು ಮನೆಯ ಮಾಳಿಗಿ...

ಕಾಂತೆ ಕೇಳೆ ಕರುಣದಿಂದ
ಬಂತು ತಾನೆ ಹುಬ್ಬಿ ಮಳೆಯು
ಎಂತೊ ಶಿಶುನಾಳಧೀಶ ತಾ
ನೆಂತು ಪೊರೆವನು ಎಂದು ನಂಬಿದೆ

ಸೋರುತಿಹುದು ಮನೆಯ ಮಾಳಿಗಿ..

 

 

೧೦.ಅಳಬೇಡ ತಂಗಿ

ಅಳಬೇಡ ತಂಗಿ ಅಳಬೇಡ

ನಿನ್ನ ಕಳುಹಬಂದವರೆಲ್ಲ ಉಳುಹಿಕೊಂಬುವರಿಲ್ಲ

ಅಳಬೇಡ ತಂಗಿ ಅಳಬೇಡ

 

ಖಡಕೀಲೆ ಉಡಿಯಕ್ಕಿ ಹಾಕಿದರವ್ವ|  

ದುಡಿಕೀಲೆ ಮುಂದಕ್ಕೆ ನೂಕಿದರವ್ವಾ

ಮಿಡಿಕ್ಯಾಡಿ ಮದಿವ್ಯಾದಿ  ಮೋಜು ಕಾಣವ್ವ|

ಹುಡಿಕ್ಯಾಡಿ ಮಾಯದ ಮರವೇರಿದೆವ್ವಾ

ಅಳಬೇಡ....

 

ಮಿ೦ಡೇರ ಬಳಗವು ಬೆನ್ಹತ್ತಿ ಬಂದರೆ|

ರಂ‌‌‍‍ಡೇರೈವರು ಕೂಡಿ ನಗುತಲಿ ನಿಂತಿಹರು

ಕಂಡವರ ಕಾಲ್ಬಿದ್ದು ಕೈಮುಗಿದು ನಿಂತರ

ಗಂಡನ ಮನಿ ನಿನಗ ಬಿಡದವ್ವ ನಾರಿ

ಅಳಬೇಡ....

 

ರಂಗೀಲಿ ಉಟ್ಟಿದಿ ರೆಶ್ಮಿದಡಿಸೀರಿ| ಮತ್ತ-

ಹಂಗನೂಲಿನ ಪರವಿ ಮರತೆವ್ವ ನಾರಿ

ಮಂಗಳ ಮೂರುತಿ ಶಿಶುನಾಳಧೀಶನ

ಅಂಗಳಕ ನೀ ಹೊರತಾದೆವ್ವ  ಗೌರಿ

ಅಳಬೇಡ....

(ಶ್ರೀ ಮಠದ ವಿಳಾಸ)

ಶ್ರೀ ಶರೀಫ್ ಶಿವಯೋಗಿ ಹಾಗು ಶ್ರೀ ಗುರು ಗೋವಿಂದ ಶಿವಯೋಗಿ

ಪಂಚಾಗ್ನಿ ಮಠ ಟ್ರಸ್ಟ್ ಶಿಶುವಿನಹಾಳ

ತಾ|| ಶಿಗ್ಗಾಂವ  ಜಿ|| ಹಾವೇರಿ, ಕರ್ನಾಟಕ

ಶ್ರೀ ಮಠದ ದೂರವಾಣಿ ಸಂಖೆ :- (8884578780)

@2023 ಸನಾತನ ವಿಚಾರ ಇವರ ಹೆಮ್ಮೆಯ ಕೊಡುಗೆ  ಹಾಗು wix.com

Write Us

  • Grey Instagram Icon
  • Grey YouTube Icon
  • Grey Facebook Icon

Success! Message received.

bottom of page