
ಜೀವನ ಚರಿತ್ರೆ
ಶ್ರೀ ಸದ್ಗುರು ಶರೀಫ ಶಿವಯೋಗಿಗಳ ಚರಿತ್ರೆ
ಶ್ರೀ ಶರೀಫ ಶಿವಯೋಗಿಗಳ ಜೀವನ ಚರಿತ್ರೆ ಕರ್ನಾಟಕದಲ್ಲಿ ಶಿಶುನಾಳ ಗ್ರಾಮವು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿರುವ ಒಂದು ಸಣ್ಣ ಹಳ್ಳಿ. ಅಲ್ಲಿ ದೇವಕಾರ ಎನ್ನುವ ಒಂದು ಬಡ ಮುಸಲ್ಮಾನ ಮನೆತನ ಇಮಾಮ ಸಾಹೇಬರು ಬಲು ಸಾತ್ವಿಕ ವ್ಯಕ್ತಿ, ಪರೋಪಕಾರ ಬಾಳಿನ ಉಸಿರು. ಅವರು ಹಳ್ಳಿಯ ಹಕೀಮರೆನಿಸಿಕೊಂಡಿದ್ದರು. ಗಿಡಮೂಲಿಕೆ ಶಾಸ್ತ್ರ ಅರಿತಿದ್ದ ಅವರು ದೆವ್ವ, ಭೂತ, ಪಿಶಾಚಿಗಳ ಬಾಧೆ ನಿವಾರಿಸುತ್ತಿದ್ದರು. ದೇವಕಾರ ಇಮಾಮ ಎಂದು ಜನಪ್ರಿಯರಾಗಿದ್ದರು. ಅವರ ಧರ್ಮಪತ್ನಿ ಹಜ್ಜಮಾ ದಂಪತಿಗಳಿಗೆ ಮಕ್ಕಳಿಲ್ಲದ ಕೊರತೆ ಕಾಡುತ್ತಿತ್ತು. ಹುಲಗೂರ ಹಜರೇಶಾ ಖಾದರಿಯವರ ಸೇವೆ 10-12 ವರ್ಷಗಳಿಂದ ಮಾಡುತ್ತ ಬಂದಿದ್ದರು. ಅಲ್ಲಾನ ಅನುಗ್ರಹ ಆಯಿತೇನೊ ಶರೀಫರು ಶಿಶುನಾಳದಲ್ಲಿ ತಾ. 3-7-1819 ರ ಸೂರ್ಯೋದಯದ ವೇಳೆಗೆ ಜನ್ಮ
ತಾಳಿದರು.
ಶ್ರೀ ಶರೀಫರು ಎಲ್ಲ ಮಕ್ಕಳಂತೆ ಬೆಳೆದರೂ ಅವರಿಗೆ ಹಾಗೇಕೆ ಹೀಗೇಕೆ ಎಂದು ಪ್ರಶ್ನಿಸುತ್ತಿದ್ದರು. ಅವರ ಈ ಚಿಂತನ ಶೀಲ ಬುದ್ಧಿ ಹಾಗೂ ಅವರಿಗೆ ಭಜನೆ ಹಾಡುಗಳಲ್ಲಿ ಒಲವು ಶಾಸ್ತ್ರ, ಪುರಾಣಗಳನ್ನು ಆಸಕ್ತಿಯಿಂದ ಆಲಿಸುತ್ತಿದ್ದರು. ಊರಿನ ಸ್ವಾಮಿಗಳು ಶರೀಫರಿಗೆ ವೀರಶೈವ ಸಾಹಿತ್ಯ ಶರಣರ ಜೀವನದ ಬಗ್ಗೆ ಏಳೆತನದಲ್ಲಿಯೇ ಸಾಹಿತ್ಯ ಸಂಸ್ಕøತಿ, ಸಂಸ್ಕಾರಗಳ ಪರಿಚಯ ಮಾಡಿಕೊಟ್ಟರು.
ಅವರಿಗೆ ಒಂದು ಸ್ವಪ್ನದಲ್ಲಿ ಒಬ್ಬ ಯತಿಗಳು ಶರೀಫ ಬೇಗ ಬಾ ಬಾರಪ್ಪ ಎಂದು ಕರೆದಂತಾಗುತ್ತಿತ್ತು. ಆ ವಿಷಯ ತಂದೆಯವರಲ್ಲಿ ತಿಳಿಸಿದರು. ಹೀಗೆಯೇ ಸ್ವಪ್ನದ ಚಿಂತೆ ಕಾಡುತ್ತಿರಲು ಹೀಗೆಯೇ ಸಮಯ ಸರಿಯುತ್ತಿತ್ತು. ಕರುಳು ಕಾತರಿಸುತ್ತಿತ್ತು. ಗುರುವು ಹೊರಗೆ ನೋಡುವ ಸಂಯೋಗ ಸಂಧಿಸಿತು. ಶರೀಫರ ಭಾಗ್ಯದ ಬಾಗಿಲು ತೆರೆಯಿತು. 1830-31 ನೇ ಇಸ್ವಿ ಇರಬೇಕು ತಮ್ಮ ಮನೆಯ ಎದುರಿಗೆ ಕಟ್ಟಿಗೆ ಬೊಡ್ಡೆ ಮೇಲೆ ಕುಳಿತ ಶರೀಫರಿಗೆ ಒಬ್ಬ ತೇಜಸ್ವಿ ಯತಿಗಳು ತಮ್ಮ ಮನೆಯ ಕಡೆಗೆ ಬರುವದು ಕಾಣಿಸಿತು. ತಂದೆಗೆ ಅತ್ತ ಉದ್ವೇಗದಿಂದ ಬಾಬಾ ನನ್ನ ಕನಸಿನ ಯತಿಗಳು ಬರುತ್ತಿದ್ದಾರೆ. ನೋಡು ತಂದೆ ಇಮಾಮರು ಅತೀ ಆನಂದದಿಂದ ಶ್ರೀ ಗುರು ಗೋವಿಂದ ಯತಿಗಳಿಗೆ ಬರಬೇಕು ಎಂದು ಬರ ಮಾಡಿಕೊಂಡರು. ಬಂದಂಥ ಯತಿಗಳು ಕಳಸದ ಗೋವಿಂದ ಭಟ್ಟರು. ಅವರು ಶಕ್ತಿಯ ಉಪಾಸಕರು ಬಲು ಸರಳ ಜೀವಿ ತಲೆಗೊಂದು ರುಮಾಲು ಬರಿ ಮೈ, ಮ್ಯಾಲೆ ಒಂದು ವಸ್ತ್ರ, ಬಡಕಲ ಶರೀರದಲ್ಲಿ ಬಹಳಷ್ಟು ಆತ್ಮಜ್ಞಾನ ತುಂಬಿಕೊಂಡಿದ್ದರು. ಶ್ರೀ ಗೋವಿಂದಭಟ್ಟರು ಮೋಕ್ಷಾ ಗುರು, ಶರೀಫರ ಎದೆಯ ಹೊಲದ ಮಣ್ಣನ್ನು ಪರೀಕ್ಷಿಸಲು ಬಂದಿದ್ದರು. ಅವರಿಗೆ ಹಲವಾರು ಬ್ರಾಹ್ಮಣ ಶಿಷ್ಯರಿದ್ದರು. ಆದರೆ ತಮ್ಮ ತಪಸ್ಸು ಹೊತ್ತು ಮೆರೆಯಬಲ್ಲ ಒಬ್ಬ ಸತ್ ಶಿಷ್ಯನನ್ನು ಹುಡುಕುತ್ತಿದ್ದರು. ಅವರಲ್ಲಿ ಆಧ್ಯಾತ್ಮದ ರಾಶಿ ಇತ್ತು. ಶರೀಫರ ಆತ್ಮೋದ್ಧಾರದ ಭಾಗ್ಯದ ಭಾಸ್ಕರರಾಗಿ ಬಂದರು. ಅಷ್ಟರಲ್ಲಿ ಊರ ದೈವವೇ ಕೂಡಿತ್ತು. ಪುಟ್ಟ ಶರೀಫರಿಗೆ ಗುರುಗಳು ಶರೀಫ ನಿಮ್ಮ ಅಪ್ಪ ಯಾರೋ ಅಂತ ಕೇಳಿದರು. ಅವರು ತಡವರಿಸದೇ ಗಾಬರಿಗೊಳ್ಳದೇ ಒಂದು ಕ್ಷಣದಲ್ಲಿ ದೇವಾ ನೀವು ಯಾವ ಅಪ್ಪನನ್ನು ಕೇಳುತ್ತಿರುವಿರಿ ಅದು ನನಗೆ ಸ್ಪಷ್ಟವಾಗಬೇಕು ಎಂದರು. ಹಾಗೆಂದರೆ ಏನೋ ಶರೀಫ ಅಂತ ಗುರುಗಳ ಪ್ರಶ್ನೆಗೆ ಶರೀಫರು ದೇವಾ ಒಂದು ಜೀವ 84 ಲಕ್ಷ ಯೋನಿಗಳಲ್ಲಿ ಹುಟ್ಟಿ ಹುಟ್ಟಿ ಬರುತ್ತದೆ ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ. ನಾನೂ ಈ ಹಿಂದೆ ನೂರಾರು ಸಲ ಹುಟ್ಟಿದ್ದೇನೆ ಸತ್ತಿದ್ದೇನೆ. ಹುಟ್ಟಿದಾಗೊಮ್ಮೆ ನನ್ನ ಅಪ್ಪ ಇದ್ದೆ ಇದ್ದ ಇಂಥ ಹಲವಾರು ಅಪ್ಪಂದಿರಲ್ಲಿ ನೀವು ಯಾವ ಅಪ್ಪನನ್ನು ಕೇಳುತ್ತೀರಿ? ಅನ್ನುವದು ಸ್ಪಷ್ಟವಾದರೆ ನಾನು ಇಂಥ ಜನ್ಮದಲ್ಲಿ ಇಂಥವನೇ ನನ್ನ ಅಪ್ಪ ಆಗಿದ್ದನು ಎಂದು ಹೇಳುತ್ತೇನೆ. ಗುರುಗಳು ಮನಸ್ಸಿನಲ್ಲಿ ಹಿಗ್ಗುತ್ತ ಶರೀಫಾ ಒಂದು ಜೀವಕ್ಕೆ ಎಷ್ಟು ಮಂದಿ ಅಪ್ಪಂದಿರೋ ಬಾಳಾ? ಎಂದು ಪ್ರಶ್ನಿಸಿದರು. ತಂದೇ ಒಂದು ಜೀವಕ್ಕೆ ಇಬ್ಬರು ಅಪ್ಪಂದಿರು ಒಬ್ಬ ಹಡದಪ್ಪ, ಒಬ್ಬ ಪಡೆದಪ್ಪ . . . ಈ ಜನ್ಮದಲ್ಲಿ ನನ್ನ ಹಡೆದಪ್ಪ ಇವರು ಎಂದು ಇಮಾಮ ಸಾಹೇಬರನ್ನು ತೋರಿಸಿದರು. ಗುರುಗಳು ಇವರು ಹಡೆದಪ್ಪರಾದರೆ ಪಡೆದಪ್ಪ ಯಾರೊ? ಎಂದು ಕೇಳಿದರು. ಶರೀಫರು ತಂದೆ ಮತ್ರ್ಯದ ಮೈಯನ್ನು ನೀಡುವವನೇ ಹಡೆದಪ್ಪ ಮತ್ರ್ಯತ್ವವನ್ನು ನೀಗಿ ಮೋಕ್ಷ ಕೊಡುವವನೆ ಪಡೆದಪ್ಪ. ಶರೀಫರು ಮಾತು ಕೇಳಿ ಗುರುಗಳಿಗೆ ಅಭಿಮಾನ ಅಂತಃಕರಣ ತುಂಬಿ ಬಂತು ಇಷ್ಟೆಲ್ಲ ನೀನು ಹೇಳಿದ ಮ್ಯಾಲ ನಿನ್ನ ಪಡೆದಪ್ಪ ಎಲ್ಲಿದ್ದಾರೆ ಅನ್ನುವದು ಗೊತ್ತೇನೊ? ಪ್ರಸನ್ನ ಚಿತ್ರರಾದ ಶರೀಫರು ಗುರುಗಳ ಚರಣಕ್ಕೆ ಹಣೆ ಹಚ್ಚಿ ದೇವಾ ನಾನು ಬಹಳ ಪುಣ್ಯವಂತ ನನ್ನ ಪಡೆದಪ್ಪ ನನ್ನನ್ನು ಹುಡುಕುತ್ತ ನನ್ನ ಮನೆಗೆ ಬಂದಿದ್ದಾರೆ. ನೀವೇ ನನ್ನ ಪಡೆದಪ್ಪ ಎಂದು ನಮಿಸಿದರು. ಹರ್ಷದಿಂದ ಗುರುಗಳ ಕಣ್ಣು ಹನಿಗೂಡಿದವು. ಇಮಾಮರಿಗೆ ಭೂಮಿ ಹದವಾಗಿದೆ ನಾನು ಬೀಜ ಬಿತ್ತಿದರೆ ತಕ್ಕ ಫಲ ಸಿಗುತ್ತದೆ. ನನ್ನ ವಸ್ತು ನಾನು ಒಯ್ಯುತ್ತೇನೆ. ಹಡೆದ ತಂದೆ ಪಡೆದ ತಂದೆಯ ಉಡಿಯೊಳಗೆ ಹಾಕಿದರು. ಕಳಸದ ಗೋವಿಂದ ಭಟ್ಟರು ಶಿಶುನಾಳದ ಇಮಾಮ ಸಾಹೇಬರ ಮಗನಾದ ಶರೀಫನನ್ನು ಕಳಸಕ್ಕೆ ಕರೆದುಕೊಂಡು ಬಂದರು. ತಮ್ಮ ಮನದಲ್ಲಿ ಮನೆಯಲ್ಲಿ ಸ್ಥಳ ನೀಡಿದರು. ತಮ್ಮ ಅನ್ನದಲ್ಲಿ ಅವರಿಗೆ ಅನ್ನ ನೀಡಿದರು. ಅವರ ಪಾರಮಾರ್ಥಿಕ ತಂದೆಯಾದರು. ಎಲ್ಲಿಯದೊ ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪಿನ ಸಂಬಂಧ ಎಂಥದೊ ಮಧುರ ಮಿಲನ ಕರ್ನಾಟಕದ ಆಧ್ಯಾತ್ಮ ಪ್ರಪಂಚಕ್ಕೆ ಹೊಸ ಬಣ್ಣ ಬಂತು. ಶಿಶುನಾಳದಲ್ಲಿ ಶರೀಫರು ಹುಟ್ಟಿರದಿದ್ದರೆ ಕಳಸದ ಗೋವಿಂದ ಭಟ್ಟರು ಊರಲ್ಲಿ ಮದುವೆ ಮುಂಜುವೆಗಳ ಮುಹೂರ್ತ ಹೇಳುವ ಬ್ರಾಹ್ಮಣರಾಗಿಯೇ ಉಳಿಯುತ್ತಿದ್ದರೋ ಏನೋ ಜನ್ಮಾಂತರದ ಗುರು ಶಿಷ್ಯ ಜೋಡಿ ಬೆಸೆಯಿತು. ಧರ್ಮ ಸಮನ್ವಯ ಪರಧರ್ಮ ಸಹಿಷ್ಣುತೆಗೆ ಇಬ್ಬರೂ ಹೆಸರುವಾಸಿಯಾದರು.
ಶೀಲ ಚಾರಿತ್ರ್ಯ ವೀರ ಮಡಿವಂತಿಕೆಗೆ ಕಳಸದಲ್ಲಿ ಹೆಸರಾದ ಬ್ರಾಹ್ಮಣರ ಮನೆಯಲ್ಲಿ ಮುಸಲ್ಮಾನರ ಒಬ್ಬ ಹುಡುಗ ಓಡಾಡತೊಡಗಿದ. ಗೋವಿಂದಭಟ್ಟರು ತಮ್ಮ ಇಡೀ ಆಧ್ಯಾತ್ಮ ಸಾಮ್ರಾಜ್ಯದ ಸಂಪೂರ್ಣ ಆಸ್ತಿಗೆ ಅಧಿಕಾರಿ ಆಗುವ ರೀತಿಯಲ್ಲಿ ತರಬೇತಿಗೊಳಿಸಲು ಅಣಿ ಆದರು. ಸಂಸ್ಕಾರ ನೀಡಿದರು, ದೀಕ್ಷೆಕೊಟ್ಟರು. ಜನಿವಾರ ಬೇಕೆನುತ ಬ್ರಹ್ಮಜ್ಞಾನ ಉಚ್ಛರಿಸೆಂದು ಹಾಡಿದರು. ನನ್ನ ಪಡೆದ ತಂದೆ ನನ್ನ ಗುರುಗಳು ನನಗೆ ದಾರ ಈ ದಾರ ಹಾಕಲಿಲ್ಲ ಭಗವಂತನ ಆಧಾರ ಹಾಕಿದರು ಎಂದು ಹೇಳುತ್ತಿದ್ದರು. ಆಗಿನ ಕಾಲ 1835-40 ರಲ್ಲಿ ಮಡಿವಂತಿಕೆ ಮೇಲು ಕೀಳು ಜಾತಿ ಎನ್ನುವದು ಪರಾಕಾಷ್ಠಕ್ಕೆ ಮೀರಿತ್ತು. ಕೀಳು ಜಾತಿಯವರನ್ನು ದೂರವಿಡುವ ಕಾಲದಲ್ಲಿ ಒಬ್ಬ ಬ್ರಾಹ್ಮಣ ಗುರು ಮುಸಲ್ಮಾನರ ಮಗ ಶರೀಫರನ್ನು ಮನೆಗೆ ಕರೆತಂದು ಜಾತಿಯ ಮಾತನ್ನೆ ಎತ್ತದ ಮಡಿ ಮೈಲಿಗೆಯನ್ನು ಕಿತ್ತು ಹಾಕಿದ ಗುರುಗೋವಿಂದ ಭಟ್ಟರ ಬಡಕಲು ಮೈಯಲ್ಲಿ ಧರ್ಮ ಸಾಮರಸ್ಯ ಪರಧರ್ಮ ಸಹಿಷ್ಣುತೆ ಜಾತ್ಯಾತೀತದ ನಿಲುವು ಸಂಸ್ಕಾರದ ಸೌರಭಕ್ಕೆ ಕಳಸದ ಗೋವಿಂದ ಭಟ್ಟರು ನಾಡಿನಲ್ಲಿ ಜೀವಂತ ನಿದರ್ಶನವಾಗಿದ್ದರು. ಶರೀಫರು ಶ್ರೀ ಗೋವಿಂಧ ಭಟ್ಟರ ಅರುಹಿನ ಗರಡಿಯಲ್ಲಿ ತರಬೇತು ನಡೆದಾಗ ಸುತ್ತಲಿನ ಬದುಕಿನಲ್ಲಿ ಕಟು ಅಸಹ್ಯ ವರ್ತನೆ ಬಾಳಿನ ವಿರೂಪ ದರ್ಶನ ಕಣ್ಣಿಗೆ ಕಂಡಿತು. ಈ ಮನುಷ್ಯನ ದೇಹವು ಹಾಳಾದ ಬೀಳುವ ಮನೆಯಾಗಿದೆ. ಮನೆಯಲ್ಲಿ ಒಡೆಯನಿಲ್ಲದೇ ಬಾಗಿಲಲ್ಲಿ ಹುಲ್ಲು ಬೆಳೆದು ನಿಂತಿದೆ. ಮನದಲ್ಲಿ ತಮೋ ಗುಣ ತುಂಬಿದೆ. ಮನೆಯ ತೊಲೆ ಕಂಬಗಳು ಹುಳು ತಿಂದು ಹಾಳಾಗಿವೆ. ದೇಹವೆಂಬ ಮನೆÀ ಸೋರತೊಡಗಿದೆ. ಇದನ್ನು ಕಂಡ ಶರೀಫರು (ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ) ಎಂದು ಹಾಡಿದರು. ಹುಟ್ಟಿದ ಕೋಟ್ಯಾಂತರ ಮನೆಗಳು ಮಾಂಸ ತೊಗಲಿನ ಮನೆ, ವ್ಯಸನದ ಮನೆಗಳಾಗಿ ಮಾಯಾ ಮೋಹದ ಬಿರುಗಾಳಿಗೆ ಪ್ರಾಪಂಚಿಕ ಆಮಿಷಕ್ಕಾಗಿ ಅರಿವಿಲ್ಲದೇ ಗುರಿ ಇಲ್ಲದೇ ಸಾಗಿರುವ ಮನೆಗಳು ಸೋರತೊಡಗಿವೆ. ಇಂಥ ಕತ್ತಲೆ ತುಂಬಿದ ಮನೆ ಆರುಗಟ್ಟಿ ಮಾಳ್ಪರಿಲ್ಲ ಕಾಳಕತ್ತಲೆಯೊಳಗೆ ನಾನು ಮೇಲಕ್ಕೇರಿ ಮೆಟ್ಟಲಾರೆ ಎಂಬ ತತ್ವದ ಪದವನ್ನು ಹಾಡಿದರು, ಮರುಗಿದರು. ಎದೆ ಎಂಬ ಹೊಲದಲ್ಲಿ ಆತ್ಮಜ್ಞಾನದ ಅಮೃತ ಫಲ ಬಿತ್ತಿ ಬೆಳೆಯಬಹುದು ಎಂದು ತಿಳಿಯಲಾರದೇ ಸತ್ಯ ಭೋಗಗಳೇ ಗುರಿ ಬೆಳ್ಳಿ ಬಂಗಾರ ಮನೆ ಮಾರು ಸಂಗ್ರಹಿಸುವದೇ ಸರ್ವಸ್ವ ಎಂದು ತಿಳಿದಿದ್ದಾನೆ ಎಂದು ಶರೀಫರು ಮರಗುತ್ತಿದ್ದರು.
ಹೋಗುತಿಹುದು ಕಾಯ ವ್ಯರ್ಥ ಇದರ ಲಾಗವ ತಿಳಿದವ ಯೋಗಿ ಸಮರ್ಥ ಅವರ ಕವಿ ಹೃದಯ ಹಾಡಿತು ಈ ದೇಹದ ಮಹತ್ವವ ತಿಳಿ ಇದರೊಳಗಿನ ಗುಪ್ತ ನಿಧಿ ಹುಡುಕು ದೇಹವನ್ನು ಭೋಗಕ್ಕೆ ಮಾರಿಕೊಳ್ಳಬೇಡ. ಅದನ್ನು ಯೋಗದ ಸಿರಿಯತ್ತ ಹೊರಳಿಸು. ನಾನು ಇದರಂತೆ ಎಷ್ಟು ಜನ್ಮ ಕಳೆದಿರುವೆನೋ ನಿನಗೆ ಗೊತ್ತಿಲ್ಲ, ನೀನು ಬಂದಾಗಲೆಲ್ಲ ಮಾಡಿದ್ದು ಪ್ರಾಪಂಚಿಕ ಗಳಿಕೆ. ಪಾರಮಾರ್ಥಿಕ ಸಂಪತ್ತು ಇಲ್ಲಿ ಹೀಗೆಯೇ ಎಷ್ಟು ಸಲ ಬಂದು ಹೋಗುತ್ತಿ? ಇದಕ್ಕೆ ಕೊನೆ ಇಲ್ಲವೇ? ಇನ್ನಾದರೂ ಮೇಲೆ ಏಳು, ಕತ್ತಲೆಯಿಂದ ಹೊರಗೆ ಬಾ ಎಂದು ಇನ್ನಾರ ತಿಳಿಕಂಡೆ ತಮ್ಮ ಎಂದು ಕವಿತ್ವದಿಂದ ಎಚ್ಚರಿಸಿದರು. ಶರೀಫರಿಗೆ ಸಾಬಾ ಎಂದು ಕುಹಕವಾಗಿ ನುಡಿದವರಿಗೆ ಸಾಬಾ ಅಲ್ಲ ಅವರ ಸಾಂಬಾ (ಅಂದರು) ಶರೀಫ ಮಾಯಾ ಎನ್ನುವ ಒಬ್ಬ ಮಹಾ ಮಹಿಳೆ ಸಂಸಾರದ ಸಂತೆಯಲ್ಲಿ ಅಲ್ಪ ತೃಪ್ತಿಯನ್ನು ನೀಡುವ ವಸ್ತು ಹರಡಿದ್ದಾಳೆ. ಹೊನ್ನು, ಹೆಣ್ಣು, ಮಣ್ಣು ಎನ್ನುವ ವಸ್ತುಗಳು ಮಂಗನ ಮನಸ್ಸುಳ್ಳ ಮಾನವನ ಮನಸ್ಸು ತನಗೆ ಬೇಕಾಗುವ ವಸ್ತುಗಳನ್ನು ಕಾಣದೇ ಹೊರಗಿನ ವಿಷಯಕ್ಕೆ ಬಲಿಯಾಗಿ ತನ್ನ ಬೇಕಾದ ಗಂಡನನ್ನು ಮರೆತಿದ್ದಾಳೆ. ಆತ್ಮಜ್ಞಾನಿ ಎನಿಸುವ ಜೀವ ಮೋಹವನ್ನು ಮೆಟ್ಟಬೇಕು ಎಂದು ಭೋದಿಸುತ್ತ ಗೋವಿಂದ ಭಟ್ಟರು ಶರೀಫರ ಅಭ್ಯುದಯಕ್ಕಾಗಿ ಪ್ರಯತ್ನ ಮಾಡುತ್ತಿದ್ದರು. ಒಮ್ಮೆ ಶರೀಫ! ಸ್ನಾನ ಮಾಡಿ ಸ್ವಚ್ಛವಾಗಿ ಬಾರಪಾ ಎಂದಾಗ ಶರೀಫರು ಸ್ನಾನಕ್ಕಾಗಿ ಬಾವಿಗೆ ಹೋದಾಗ ಮನಸ್ಸು ಹೊಲಸನ್ನು ನೋಡಿತು. ಅಂಥ ಹೊಲಸು ಮನದಲ್ಲಿಟ್ಟು ಹೊರಗೆ ನೀರಿನಿಂದ ತೊಳೆದುಕೊಂಡ ಮಾತ್ರಕ್ಕೆ ಮಡಿಯಾದೆ ಅಂದರೆ ಅದು ಆತ್ಮ ದ್ರೋಹ, ಗುರು ದ್ರೊಹ, ದೇವ ದ್ರೋಹವಾದೀತೆಂದು ಚಡಪಡಿಸಿದರು. ನಾನು ಮನಸ್ಸನ್ನು ಮೈಲಿಗೆ ಮಾಡಿಕೊಂಡೆ ಎಂದು ಪಶ್ಚಾತ್ತಾಪದ ಉರಿಯಲ್ಲಿ ಬೆಂದರು. ಕಸಿವಿಸಿಗೊಂಡು ನೊಂದು ಹಾಡಿದರು (ಮಕ್ಕಳೆದರ ಸೂಳಿ ಸಂಗ ಮಾಡ ಬಾರದೊ ಅವಳ ಕಕ್ಕೂಲಾತಿಯಿಂದ ಹೋಗಿ ಅವಳ ಕೂಡ ಬಾರದೋ ಎಂದು ಅಲ್ಲಮ ಪ್ರಭುದೇವರು ಹೇಳಿದ ಹಾಗೆ ಹೆಣ್ಣು, ಹೊನ್ನು, ಮಣ್ಣು ಮಾಯ ಅಲ್ಲ, ಹೆಣ್ಣು, ಹೊನ್ನು, ಮಣ್ಣು ಮಾಯ ಎಂಬರು, ಮನದ ಮುಂದಣ ಆಸೆಯೇ ಮಾಯ ಕಾಣ ಗುಹೇಶ್ವರ) ಎಂದು ಸ್ಮರಿಸಿ ಆಗ ಮಡಿಯಾದರು. ಗೋವಿಂದಭಟ್ಟರು ಶರೀಫರ ಆಂತರಿಕ ಜ್ಞಾನವನ್ನು ಕಂಡು ಹರ್ಷಿತರಾದರು. ಗುರುಗಳ ಮನಸ್ಸನ್ನು ಗೆಲ್ಲುತ್ತಾ ಮುನ್ನಡೆಯುತ್ತಾ ಗಾವಟೀ ಶಾಲಾ ಶಿಕ್ಷಕರಾಗಿ, ಕರ್ತವ್ಯ ನಿಷ್ಠರಾದಾಗ, ಮುಸಲ್ಮಾನರು ಅವರಿಗೆ ಮಸೀದಿಗೆ ಬರಲಿಕ್ಕೆ ಹೇಳಿದರು.
ಅವರಿಗೆ ಹಾಡಿನ ಮುಖಾಂತರ ಬೋಕಿಯೊಳಗ ಮೂರು ಲೋಕ ಹುಟ್ಟಿತ್ತು, ಆ ಕುಲ ಈ ಕುಲ ಎಲ್ಲಿತ್ತು, ಜೋಕಿಲೆ ಹದಿನೆಂಟು ಜಾತಿಗೆ ಹಳತೇನಿ ಏಕ ಮುಂಡಗಿ ಮಾತಿದು ಗೊತ್ತು, ಬಲ್ಲವರಾದರೆ ತಿಳಿದು ಹೇಳಿರಿ, ಮುಲ್ಲಾನ ಮಸೂತಿ ಎಲ್ಲಿತ್ತೊ ಗುಲ್ಲ ಮಾಡಿ ಗುದ್ದಾಟದ ಲಾವಿಗೆ ಬೆಲ್ಲ ಓದಿಸೋದು ಎಲ್ಲಿತ್ತೋ ಅಂತ ಪ್ರಶ್ನಿಸಿದರೂ ಅಲ್ಲಾನನ್ನು ಅರಿಯದ ಮುಲ್ಲಾ ಬರೀ ಬೆಲ್ಲಕ್ಕೆ ಓದಕಿ ಮಾಡುತ್ತ ಕುಳಿತಿದ್ದರೆ ಏನು ಫಲ ಎಂದು ಮುಲ್ಲಾಗಳಿಗೆ ಸವಾಲ ಮಾಡಿದರು. ಮಹಮ್ಮದಿಯರಾದ ಶರೀಫರಿಗೆ ಮಹಮ್ಮದಿಯರು ವೈರಿಗಳಾದರು. ಶರೀಫ ನಿನ್ನ ಮನೆಯಿಂದ ಮಸೂತಿಗೆ ಎಡೆಯೇ ಬಂದಿಲ್ಲಾ ಅಂದಾಗ, ಎಲೋ ಮುಲ್ಲಾ ನನ್ನ ಮನೆಯ ಅರುಹಿನ ಎಡೆ ಆ ಅಲ್ಲಾ ಸಾಹೇಬರಿಗೆ ದಿನ ನಿತ್ಯ ಹೋಗುತ್ತದೆ, ಜನಾಂತರದಿಂದ ಬಂದ ಕರ್ಮವೆಂಬ ಕುರಿಯನ್ನು ಕಡಿದು ಅರಿವೆಂಬ ಎಡೆಯನ್ನು ಮಾಡೋಣ ಅಂತ (ಎಡೆಯ ಒಯ್ಯುವೆನ ಬಾರೆ | ದೇವರಿಗೆ ಎಡೆಯ ಒಯ್ಯುವ ಬಾರೆ | ಎಡೆಯ ಒಯ್ಯುವ ಬಾರೆ ಮಡಿ ಹುಡಿಯಿಂದಲಿ ಪೊಡವಿಗಧಿಕ ಎನ್ನೊಡೆಯ ಅಲ್ಲಮನಿಗೆ) ಹಾಡನ್ನು ಕಟ್ಟಿದರು. ಅಲ್ಲೊ ಶರೀಫಾ! ನೀನು ಆ ಬಡ ಬ್ರಾಹ್ಮಣನನ್ನು ಯಾಕೆ ಗಂಟು ಬಿದ್ದಿ, ನಮ್ಮಲ್ಲಿ ಬೇಕಾದಷ್ಟು ಮುಲ್ಲಾ ಮೌಲವಿಗಳಿದ್ದಾರೆ ಅಂತ ಹೀಯಾಳಿಸಿದಾಗ ಅವರಿಗೆ ಊರಿಗೆ ದಾರಿ ಯಾರು ತೋರಿದರೇನು? ಸರ್ವ ಸದ್ಗುರು ಆರಾದಡೇನು? ನಿನ್ನ ಮಸೂತಿಯಲ್ಲಿ ಬೀಳುವ ಬೆಳಕು. ಹಿಂದುಗಳ ಅಂಗಳದಲ್ಲಿ ಬೀಳುವ ಬೆಳಕಿಗೆ ಏನಾದರೂ ವ್ಯತ್ಯಾಸವಿದೆಯೇ ನಿಮ್ಮ ಮನೆಯ ಅಗ್ನಿ ಪರರ ಅಗ್ನಿ ಬೇರೆ ಇದೆಯೇ. ನೀರಿನಲ್ಲಿ ಏನಾದರೂ ಹಿಂದು ಮುಸ್ಲಿಮ ಭೇದವಿದೆಯೇ? ಎಲ್ಲರ ತಲೆಯ ಮೇಲೆ ಆಕಾಶ ಒಂದಿರುವಾಗ ಈ ಭೇದ ಭಾವ ಏಕೆ? ಅದಕ್ಕೆ ಮಹಮ್ಮದಿಯರು ನಿನಗೆ ನಮಾಜ ಎಂದರೆ ಗೊತ್ತೇನು? ಎಂದಾಗ ನಾ ಅನ್ನುವದು ಮಾಜಿ ದಾಗ ನಡೆಯುವ ಪ್ರತಿಕ್ರಿಯೆಯೇ ನಮಾಜ ಎಂದು ನನಗೆ ನನ್ನ ಗುರುಗಳು ಮೊದಲೇ ಹೇಳಿ ಕೊಟ್ಟಿದ್ದಾರೆ. ಪೂಜೆ ನಮಾಜು ಸುಳ್ಳು ಮನವೆಲ್ಲ ಶಿವಮಯ ಆಗಬೇಕು. ಅಲ್ಲಾಮಯ ವೆಂದರೆ ಅಲ್ಲಾಮಯವಾಗಬೇಕು ಎಂದಾಗ ಇಡೀ ಮುಸಲ್ಮಾನರು ಶರೀಫರ ಮನೆಯನ್ನು ಬಹಿಷ್ಕರಿಸಿದರು.
ಅದರಂತೆ ಬ್ರಾಹ್ಮಣರೂ ಶರೀಫರನ್ನು ಶಿಷ್ಯನನ್ನಾಗಿ ಮಾಡಿಕೊಂಡ ಗೋವಿಂದ ಭಟ್ಟರನ್ನು ಕಳಸದ ಬ್ರಾಹ್ಮಣರು ದೂರ ಮಾಡಿದರು. ಇದಲ್ಲದೇ ಶ್ರೀ ಗೋವಿಂದ ಭಟ್ಟರಿಗೆ ನಾನಾ ರೀತಿಯಾಗಿ ಇಲ್ಲ ಸಲ್ಲದ ಆರೋಪ ಹೊರೆಸಿ, ಅಪಪ್ರಚಾರ ಮಾಡಹತ್ತಿದರು. ಸಂಸ್ಕಾರವಿಲ್ಲದ ಮುಸಲ್ಮಾನನಾದ ಶರೀಫರ ಸಂಗಡ ಕುಡಿದು, ಹೊಲೆ ಹದಿನೆಂಟು ಜಾತಿಯನ್ನು ಒಂದು ಮಾಡಿದ್ದಾರೆ, ಕುಡಿದ ಅಮಲಿನಲ್ಲಿ ಶಾಸ್ತ್ರದ ಗಂಧವನ್ನೇ ಮರೆತಿದ್ದಾರೆ. ಇದರಿಂದ ಗೋವಿಂದ ಭಟ್ಟರಿಗೆ ಶರೀಫರ ಮನಸ್ಸಿಗೆ ನೋವಾಗಲಿಲ್ಲ. ಆದರೆ ಗೋವಿಂದ ಭಟ್ಟರಿಗೆ ಸಮಾಜದಿಂದ ಬಹಿಷ್ಕರಿಸಿದಾಗ ಅವರ ಅಣ್ಣ ಭಂಡಿ ಭಟ್ಟರಿಗೆ ಬಹಳ ಖೇದವೆನಿಸಿತು. ಮುಂದೆ ಮನೆಯ ಮಕ್ಕಳ ಮದುವೆ ಮುಂಜಿವೆ ಹೇಗೆ ಆಗಬೇಕು ಎಂದು ಚಿಂತಿಸುತ್ತಿರುವಾಗ ಒಂದು ಘಟನೆ ನಡೆಯಿತು. ಗೋವಿಂದ ಭಟ್ಟರಿಗೆ ಅತಿ ಬೇಕಾದವನಾದ ಶೀನಪ್ಪ ತನ್ನ ಮನೆಯ ಪ್ರಸ್ತಕ್ಕೆ ಗೋವಿಂದ ಭಟ್ಟರನ್ನು ಆಮಂತ್ರಿಸಲಿಲ್ಲ. ಕಾರಣ ಗೋವಿಂದ ಭಟ್ಟರನ್ನು ಕರೆದರೆ ಅವರ ಸಂಗಡ ಅವರ ಮಾನಸ ಪುತ್ರ ಶರೀಫ ಬರುತ್ತಾನೆ. ಅವರು ಬಂದರೆ ಇಡೀ ಸಮಾಜವೂ ಬರಲಿಕ್ಕಿಲ್ಲ ಅಂತ ತಿಳಿದು ಗೋವಿಂದ ಭಟ್ಟರಿಗೆ ಆಮಂತ್ರಿಸಲಿಲ್ಲ. ಅದರ ಪರಿಣಾಮ ಮಾಡಿದ ಅಡುಗೆ ಬಡಿಸುವ ಮುನ್ನ ಹಳಸಿ ಹೋಗಿ ದುರ್ವಾಸನೆಯಾಗಿ ಬಾಯಿಯಲ್ಲಿ ಹಾಕಿಕೊಳ್ಳಲಾರದಂತಾಯಿತು. ಪಶ್ಚಾತ್ತಾಪ ಪಟ್ಟು ಮತ್ತೆ ಗೋವಿಂದ ಭಟ್ಟರಿಗೆ ಕರೆದಾಗ ಇಬ್ಬರೂ ಗುರು ಶಿಷ್ಯರು ಪಂಕ್ತಿಯಲ್ಲಿ ಕುಂತಾಗ ಎಲ್ಲ ಮೊದಲಿನಂತೆ ಅನ್ನವು ಘಮಘಮಿಸ ತೊಡಗಿತು. ಶೀನಪ್ಪ ತಪ್ಪಾಯಿತೆಂದು ಕ್ಷಮೆ ಕೇಳಿದರು. ಹೀಗೆಯೇ ಅವರು ಜನರ ನಿಂದೆಯ ಕಡೆಗೆ ಲಕ್ಷ ಕೊಡದೇ ಹೊನ್ನು, ಹೆಣ್ಣು, ಮಣ್ಣು ಮಾಯೆಯನ್ನೂ ಕಾಮ ಕ್ರೋಧಗಳನ್ನು ಮೆಟ್ಟುತ್ತ ಕವಿತ್ವದಿಂದ ನನ್ನೊಳಗೆ ನಾ ತಿಳಕಂಡೆ ನನಗೆ ಬೇಕಾದ ಗಂಡನ ಮಾಡಿಕೊಂಡೆ ಗುರು ಉಪದೇಶವ ಪಡಕೊಂಡೆ, ನಾ ಗುರುಗೋವಿಂದರ ಪಾದ ಹಿಡಕೊಂಡೆ ಎಂದು, ಅವರು ಅಂತಿಂಥ ಗಂಡನಾಗಿರದೇ, ಎಲ್ಲರಂಥವನಲ್ಲ ಎನ ಗಂಡ, ಬಲ್ಲಿದನು ಪುಂಡ, ಬಲು ಪುಂಡ ಗಂಡ ಭವವನ್ನೇ ಕಿತ್ತು ಬಿಸಾಕುವ ಗಾರುಡಿಗ ಗಂಡನೆಂದು ಗುರುಗಳಿಗೆ ವಂದಿಸಿದರು. ವ್ಯಕ್ತಿ ಶಕ್ತಿಯಾಗಿ ನಡೆಯುವ ಶರೀಫರ ತಂದೆ-ತಾಯಿಗಳಿಗೆ ವಂಶೋದ್ಧಾರದ ಬಳ್ಳಿ ಹಬ್ಬಬೇಕೆಂಬ ಚಿಂತೆಯನ್ನು ಅರಿತು ಗುರು ಗೋವಿಂದ ಭಟ್ಟರು ಕುಂದಗೋಳದಲ್ಲಿ ಶರೀಫರಿಗೆ ಕನ್ಯೆ ನೋಡಿದ್ದರು. ಲಗ್ನ ಮಾತು ಬಂದಾಗ ಶರೀಫರು ತಂದೆ ಮೋಹ, ಮಾಯೆಗಳು ಬಹಳ ಕಸುವುಳ್ಳವುಗಳು ಮಡದಿ ಮಕ್ಕಳ ಮೋಹ ನನ್ನನ್ನು ಹಿಡಿದು ಮುಕ್ಕಿದರೆ ಏನೋ ಮಾಡಲಿ ಎಂದಾಗ ಗುರುಗಳು ನೀನು ಸುಮ್ಮನೆ ಮದುವೆಯಾಗು ತಾವೇ ಸ್ವತಃ ನಿಂತು ಮದುವೆ ಮಾಡಿದರು. ಬ್ರಾಹ್ಮಣರು ಮುಸಲ್ಮಾನರ ಲಗ್ನ ಮಾಡುವದು ಆಧ್ಯಾತ್ಮ ಪ್ರಪಂಚದಲ್ಲಿ ಒಂದು ಅಪೂರ್ವ ಪ್ರಸಂಗವಾಯಿತು ಲಗ್ನದಲ್ಲಿ ಹೆಂಡತಿಯ ಹೆಸರು ಹೇಳುವುದು ಕೇಳುವದು ಒಂದು ಹಾಸ್ಯಮಯ ಪ್ರಸಂಗ. ಕೆಲವೊಬ್ಬರಿಗೆ ಶರೀಫನಿಗೆ ಹೆಂಡತಿ ಹೆಸರು ಹೇಳಲು ಬರುತ್ತೋ ಇಲ್ಲೊ ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಶರೀಫರು ಹೆಂಡತಿಯ ಹೆಸರು ಫಾತಿಮಾ ಅದು ತಂದೆ ತಾಯಿಗಳು ಹುಟ್ಟಿದ ದೇಹಕ್ಕೆ ಕೊಟ್ಟ ಹೆಸರು ಆದರೆ ಶರೀಫರು ಯಾರೂ ಹೆಸರಿಡದ ಆತ್ಮ ಚೈತನ್ಯಕ್ಕೆ ಏನೆಂದು ಕರೆಯುವದು. ಅಷ್ಟೇ ಅವಳು ನನ್ನ ಹೆಂಡ್ತಿ, ಅವಳ ಹೆಸರು ಏನು ಹೇಳಲಿ ಗುಣವಂತೆ ಎಂದು ಕುಣಿದಾಡಿ ಪದವನ್ನು ಕಟ್ಟಿ ಹರುಷದಿಂದ ಹಾಡಿದರು. ಹೆಂಡತಿ ಮನೆಗೆ ಬಂದಳು ಸುಖವೊ ದುಃಖವೊ ಎರಡೂ ಸಮನಾಗಿ ಉಂಡರು. ಒಬ್ಬ ಮಗಳು ಹುಟ್ಟಿದಳು ಅವಳಿಗೆ ಪ್ರೀತಿಯಿಂದ ಲತ್ತುಮಾ ಎಂದು ಹೆಸರಿಟ್ಟರು. ದಿನಗಳು ಉರುಳಿದವು ಶರೀಫರ ತಂದೆ-ತಾಯಿಗಳು ದೇಹ ಬಿಟ್ಟರು.
ಮುಸಲ್ಮಾನರು ಅವರನ್ನು ಖಬರಸ್ತಾನದಲ್ಲಿ ಹೂಳಲು ಬಿಡಲಿಲ್ಲಾ. ಅದಕ್ಕೆ ಅವರು ತಮ್ಮ ಹೊಲದಲ್ಲಿಯೇ ಅಂತ್ಯಕ್ರಿಯೆ ಮಾಡಿ ಪೂಜಿಸುತ್ತಿದ್ದರು. ಎರಡು ಬೇವಿನ ಮರಗಳನ್ನು ನೆಟ್ಟರು. ಕಾಲಾಂತರದಲ್ಲಿ ಆ ಎರಡೂ ಬೇವಿನ ಮರಗಳು ಒಂದಾದವು. ನಡುವೆ ಮಲ್ಲಿಗೆಯ ಬಳ್ಳಿನೆಟ್ಟರು. ಮಾತೃದೇವೊ ಪಿತೃದೇವೊ ಎಂದು ಅವರಿಗೆ ಆ ಸ್ಥಳವೇ ಮಕ್ಕಾ ಮದೀನಾ, ಕಾಶಿ, ಕಾಬಾ, ಕೈಲಾಸವೆನಿಸಿದವು. ಸಜಾತಿಗಳ ತಿರಸ್ಕಾರ ಸಮಾಜದ ವೈರಿ ಅದರಲ್ಲಿ ಬಡತನ ಯಾರಿಗೂ ಕೈ ಒಡ್ಡದ ಸ್ವಾಭಿಮಾನ, ಅಂಥದ್ದರಲ್ಲಿ ಪತ್ನಿಯೂ ತೀರಿಕೊಂಡಳು. ಜೀವನ ಯಾತ್ರೆ ಬಿಸಿಲು-ನೆರಳು, ಸುಖ-ದುಃಖ ಅನುಭವಿಸುತ್ತಾ ಜೀವಕ್ಕೆ ಅನ್ನ ಆಶ್ರಯ, ಆಚ್ಛಾದನೆಯ ಚಿಂತೆಯಿಂದ ಬೇಗುತ್ತಾ ಕುಂಟುತ್ತಾ ನಡೆದ ಜೀವನ ಜಾತ್ರೆಗೆ (ಹುಟ್ಟಿದ ಹೊಲೆಮನೆ ಬಿಟ್ಹೊಂಟಿ ಕಾಯಮನಿ ಎಷ್ಟಿದ್ದರೇನಿದು ಖಾಲಿ ಮನೆ) ಎಂದು ಈ ಜೀವ ಸದಾ ದೇವರ ಧ್ಯಾನವನ್ನು ಭಜಿಸುವ ದೇವ ಮಂದಿರವಾಗಬೇಕೆಂದು ಆಶಿಸಿದರು. ಬದುಕೇನು ಮಾಡಿದಿ ಇಲ್ಲೆ ! ಸುಳ್ಳೆ ಮುದುಕಾಗಿ ಮೆರೆದಲ್ಲೊ ಛೀ ಹುಚ್ಚಮರಳೆ! ಎಂದು ಮಾನವ ಜನ್ಮ ವ್ಯರ್ಥ ಮಾಡಬಾರದು ಎಂಬ ತತ್ವವನ್ನು ಅರುಹಿದರು. ಅಯ್ಯಾ ಆ ದೇವರ ಪುಣ್ಯದ ಸೀಮೆಗೆ ಒಯ್ಯುತ್ತೇನೆ ಬರುತ್ತೀಯಾ ನನ್ನ ಸಂಗಡ (ಅಲ್ಲಿಕೇರಿಗೆ ಹೋಗೋಣ ಬರ್ತಿರೇನ್ರೆ ಒಲ್ಲದಿದ್ದರೆ ಇಲ್ಲೆ ಇರ್ತಿರೆನ್ರೇ) ಅನ್ನದ ನೀರಿನ ರಕ್ತದ ಋಣಕ್ಕೆ ಒಳಪಟ್ಟು ಇತ್ತ ಅಣ್ಣ ತಮ್ಮ ಅಕ್ಕ ತಂಗಿ ಗಂಡ ಹೆಂಡತಿ ಮಕ್ಕಳೆಂಬ ಬಾಂಧವ್ಯದಲ್ಲಿ ಸಿಕ್ಕು ಜೀವನದ ಗುರಿ ಏನು ಎನ್ನುವದು ಮರೆತಿದ್ದಾನೆ. ತಾನು ಬಿದ್ದ ತಗ್ಗಿನಲ್ಲೇ ಬೀಳುತ್ತ ಅಳುತ್ತ ಮುಂದೆ ದಾರಿ ಕಾಣದೇ (ಅಳಬೇಡಾ ತಂಗೀ ಅಳಬೇಡ ಅತ್ತರೆ ನಿನ್ನನ್ನು ತವರು ಮನೆಯವರು ಇಟ್ಟುಕೊಳ್ಳುತ್ತಾರೆಯೊ?) ಎಲ್ಲರೂ ನಿನ್ನನ್ನು ಸಂಸಾರದ ಕೆಸರಿನಲ್ಲಿ ತಳ್ಳುವವರೇ ಅದರ ಬದಲಾಗಿ ಆತ್ಮೋದ್ಧಾರದ ಹಾದಿ ಹೇಳಿಕೊಟ್ಟ ಪಾರಮಾರ್ಥಿಕ ಜೀವನ ತೋರಿಸುವವರು ಯಾರೂ ಇಲ್ಲಾ ನೀನು ಅಳುವದಾದರೂ ಏತಕ್ಕೆ ಹುಟ್ಟಿದ ಮನೆ ಹೆತ್ತ ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಬಂಧು ಬಳಗ ಬಿಟ್ಟು ಹೋಗಬೇಕೆಂದು ಅಳುತ್ತಿಯೊ? ಇವರೆಲ್ಲ ನಡುವೆಯೇ ಬಂದು ನಡುವೆಯೇ ನಿನ್ನನ್ನು ಬಿಟ್ಟು ಹೋಗುವರು. ಅವರಿಗಾಗಿ ಅಳಬೇಡ ಹುಚ್ಚೆ! ಕೊನೆಗೆ ಶಿವನನ್ನೆ ಸೇರುವ ನೀನು ಅವನಿಗಾಗಿ ಅಳು ಆಗ ನಿನ್ನ ಅಳುವಿಕೆಗೆ ಕಿಮ್ಮತ್ತು ಬರುತ್ತದೆ ಎಂದು ಪ್ರತಿ ಜೀವಕ್ಕೆ ಸಾಂತ್ವನ ಹೇಳುತ್ತ ಆ ಮುಪ್ಪು ಆವರಿಸಿದ ಜೀವ ಕಣ್ಣು ದೃಷ್ಟಿಮಂದವಾಗಿ ಕಿವಿ ಕೇಳುತ್ತಿಲ್ಲ ದೇಹ ಸೊರಗಿದೆ ಬೆನ್ನು ಬಾಗಿದೆ ತಲೆ ಕೂದಲು ಬೆಳ್ಳಗಾಗಿವೆ ತೊಗಲು ಜೋತು ಬಿದ್ದಿದೆ. ಬಾಯಿ ಬಚ್ಚಾಗಿದೆ ಇನ್ನೂ ಜೀವ ಜೀವನದ ಸವಿಯನ್ನು ಸವಿಯಲು ಹಸಿದಿದೆ ಹಾತೊರೆಯುತ್ತಿದೆ. ಅಂಥ ಹುಲಗೂರ ಸಂತೆಯಲ್ಲಿ (ಬಿದ್ದಿಯಬೇ ಮುದಿಕಿ ಬಿದ್ದಿಯಬೇ) ಎಂದು ಅಶಕ್ತ ಅಸಹಾಯಕ ಜೀವಕ್ಕೆ ಎಚ್ಚರಿಸುತ್ತಿದ್ದಾರೆ. ಅದಕ್ಕೆ ಕಾರಣ ಆ ಜೀವ ಅಧೋಮುಖವಾಗಿ ಪಾರಮಾರ್ಥಿಕ ಜ್ಞಾನವಿಲ್ಲದೇ ಸದ್ಗುರುವಿನ ಸಹಾಯ ದೊರೆಯದೆ ಕಾಳಕತ್ತಲೆಯಲ್ಲಿ ನೊಂದು ಬೆಂದು ಒದ್ದಾಡುತ್ತಿದೆ.
ಆತ್ಮೋದ್ಧಾರದ ಹಸಿವು ಹುಟ್ಟಬೇಕು ಆಗ ಅವನು ದೇವನೆಡೆಗೆ ಹೊರಳುತ್ತಾನೆ. (ನಡಿಯೋ ದೇವರ ಚಾಕರಿಗೆ ಮುಕ್ತಿಗೊಡೆಯ ಖಾದರಲಿಂಗ ನೆಲೆಸಿರ್ಪ ಗಿರಿಗೇ) ಎಂದು ಮನುಷ್ಯ ಜೀವಗಳಲ್ಲಿ ಎಲೇ ಮನುಷ್ಯ ಬರಿ ನೌಕರಿ ಮಾಡುವದಕ್ಕಿಂತ ಮಹಾದೇವನ ಚಾಕರಿ ಮಾಡು ಎಂದು ಹೇಳುತ್ತ (ನೋಡೋಣ ಬಾ ಗೆಳತಿ ನಾಡೋಳು ಹುಲುಗೂರ ಸಂತಿ) ಎಂದು ಪದವ ಹಾಡಿದರು. ಶರೀಫರನ್ನು ನಾಗಲಿಂಗ ಅಜ್ಜನವರು ಸಂತೆಯಲ್ಲಿ ಕಂಡವರೇ ಶರೀಫರ ತಲೆಯ ಮೇಲಿನ ರುಮಾಲು ಹೊಡೆದು ಕೆಡವಿದರು. ಆಗ ಶರೀಫರು ನಾಗಲಿಂಗಾ ಇನ್ನು ಎಂಟು ದಿವಸದಲ್ಲಿ ನನ್ನ ಹೆಣ್ತಿ ಸಾಯತಾಳ ಅವಳ ಸಾವಿನ ವಿಚಾರ ನೀನು ತಿಳಿಸಿದಿ ಶರೀಫ ನಿನಗೆ ಹೆಂಡತಿ ಸಾಯತಾಳ ಅಂದರೆ ದುಃಖವಾಗಲಿಲ್ಲವೇ? ಎಂದಾಗ ನಾಗಲಿಂಗ ಶರೀರ ಸಾಯುವದಕ್ಕೆ ಹುಟ್ಟುತ್ತದೆ. ಆದರೆ ಆತ್ಮ ಅಮರವಾಗಿರುತ್ತದೆ. ಈ ಶರೀರ ಸತ್ತರೆ ಅದಕ್ಕೆ ಯಾಕೆ ಅಳಬೇಕು ಇತ್ತ ಶರೀಫರ ಹೆಂಡತಿ ಹಬ್ಬಕ್ಕೆಂದು ಹೊರಟುನಿಂತಾಗ ನೀನು ಹೋಗುತಿದ್ದಿ ಹೋಗು ತಿರುಗಿ ಬರುವದಿಲ್ಲ ಎಂದರು ಅವಳು ನನಗೂ ಗೊತ್ತಿದೆ ಎಂದು ಹೋದರೂ ಮರಳಿ ಶಿಶುನಾಳಕ್ಕೆ ಬರಲಿಲ್ಲ. ಕುಂದಗೋಳದಲ್ಲಿ ದೇಹ ಬಿಟ್ಟು ಸುದ್ದಿ ಮುಟ್ಟಿಸಲು ಹೋದವನಿಗೆ ಹುಚ್ಚಪ್ಪ ನನ್ನ ಹೆಂಡತಿ ಸಾಯುವ ಮೊದಲು ಇಲ್ಲಿಗೆ ಬಂದು ಆಶೀರ್ವಾದ ಪಡೆದು ಹೋಗಿರುವಳು. ಆಗ ಒಂದು ಬೊಗಸೆ ಮಣ್ಣು ತೊಗೊಂಡು ಮಣ್ಣಿಗೆ ಬಿಡುತ್ತ ನನ್ನ ಸಂಸಾರಕ್ಕೆ ಈ ಹೆಂಡತಿ ಎಂಬ ಮೋಹದ ಎಳಿ ಅಂಟಿಕೊಂಡಿತ್ತು ಅದು ನಿನ್ನೆಗೆ ನಾನು ಪರಂಜಾಳನಾದೆ ಇನ್ನು ಮೇಲೆ ಈ ಸಂಸಾರವೆಂಬ ಮಾವನ ಮನೆಯ ಹಂಗಿಲ್ಲ ನನಗೆ (ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೊ) ಅರ್ಧಾಂಗಿಯ ಸಾವು ಅವರ ಮನಸ್ಸಿನ ಮೇಲೆ ಏನೂ ಪರಿಣಾಮವಾಗಲಿಲ್ಲ. ಒಮ್ಮೆ ಶರೀಫರು ಊರ ಗೌಡನ ಮನೆಯ ಮುಂದೆ ಹಾದು ಹೋಗುವಾಗ ಗೌಡರಿಗೆ ನಮಸ್ಕಾರ ಮಾಡಲಿಲ್ಲ ಗೌಡರು ಸಿಟ್ಟಿಗೆದ್ದು ಲೇ ಶರೀಫಾ ನಿನಗೆ ಎಷ್ಟು ಸೊಕ್ಕು ಆ ಗುರು ನಿನಗೆ ಊರಿನ ಗೌಡರಿಗೆ ನಮಸ್ಕಾರ ಹಾಕಬೇಕೆಂದು ಹೇಳಿಕೊಡಲಿಲ್ಲವೇ? ಎಂದು ಅಣಿಕಿಸಿದಾಗ ಗೌಡಾ ಬಲ್ಲಂಥ ಆತ್ಮಜ್ಞಾನಿಗೆ ಈ ಶರೀರವೇ ಒಂದು ಊರು ತಲೆಯೇ ಚಾವಡಿ ಅಲ್ಲಿ ಮೇಲೆ ಕುಳಿತ ಅರಿವೇ ಗುರುವು ಅವನೇ ಗೌಡ ಅಂಥ ಗೌಡರಿಗೆ ನಮಸ್ಕರಿಸು ನಿನ್ನಂಥ ಹಳ್ಳಿಗೌಡನನ್ನು ನಮಸ್ಕರಿಸಲು ಹೇಳಿಲ್ಲ ಊರ ಜನರ ಎದುರಿಗೆ ಗೌಡನಿಗೆ ಅವಮಾನವಾಯಿತು. ಆ ಗೌಡನು ಶರೀಫರನ್ನು ನಿಂದಿಸಿದನು. ಆಗ ಶರೀಫರು ಗೌಡಪ್ಪ ನಿನ್ನಿಂದ ನಿಂದಿಸಿಕೊಳ್ಳಬೇಕೆಂದು ನನ್ನ ಪ್ರಾರಬ್ಧದಲ್ಲಿ ಬರೆದಿತ್ತು. ನಿನ್ನ ಕೆಲಸ ನೀನು ಮಾಡಿದಿ ಬಡ್ಡಿ ಗಂಟು ಚುಕ್ತಾ ಆಯಿತು. ಶರೀಫರಿಗೆ ಅವಮಾನದ ಪ್ರಶ್ನೆ ಬರಲಿಲ್ಲ. ಗೌಡಪ್ಪ ನಿಂದಿಸಿದ್ದು ಈ ದೇಹಕ್ಕೆ. ನಾನು ದೇಹವಲ್ಲ ನಾನು ಸಚ್ಚಿದಾನಂದ ಪರಮಾತ್ಮ ಸ್ವರೂಪ ಎಂದು ತಿಳಿದು ಪ್ರತೀಕಾರ ಮಾಡಲಿಲ್ಲ.
ಮಾನಾಪಮಾನಗಳ ಮೇರೆಯನ್ನು ದಾಟಿದ್ದರು. ಶ್ರೀ ಶರೀಫರು ಗುಡಗೇರಿ ಗ್ರಾಮದ ಗ್ರಾಮ ದೇವತೆ ದೇವಸ್ಥಾನಕ್ಕೆ ಹೋಗಿ ಸ್ತ್ರೀದೇವಿಯನ್ನು ಕುರಿತು ಪ್ರಾರ್ಥಿಸಿ ಮೂಗುತಿಯನ್ನು ಪಡೆದರು. ಬಡತನದ ಬೇಗೆ ತಾಳಲಾರದೇ ಸಾಲಗಾರರ ಸಾಲವನ್ನು ಮುಟ್ಟಿಸದೇ ಬಡತನದಲ್ಲಿ ಊರ ಶಾನುಭೋಗರ ಮನೆಗೆ ಹೋದರೆ ಆ ಶ್ರೀಮಂತ ಅವರನ್ನು ನಿಂದಿಸಿ, ಬೈದು, ನೂರಾರು ಮಾತಾಡಿ ಕೊಟ್ಟ ಆರಪಾವು ಜೋಳ ಅವರ ಮನೆಯಲ್ಲಿಯೇ ಹಾಕಿ ಬಂದರೂ ಆ ಮಹಾದೇವನನ್ನೇ ಕೇಳಬೇಕು, ಮಾನವನನ್ನು ಕೇಳಬಾರದು. ಕಡೆಗೆ ಗೋವಿಂದ ಭಟ್ಟರಿಗೆ ನಂಬಿದರು. ಅವರು ಶಿಷ್ಯನ ಕೈ ಬಿಡಲಿಲ್ಲ ತಮ್ಮ ಜನ್ಮಾಂತರದ ತಪಸ್ಸಿನ ಫಲವನ್ನೇ ಧಾರೆ ಎರೆದರು. ಗುರುಗಳ ಆತ್ಮಜ್ಞಾನದ ಅರಮನೆಗೆ ಶರೀಫರೇ ವಾರಸುದಾರರಾದರು. (ಸದ್ಗುರು ಸಾಕಿದ ಮದ್ದಾನಿ ಬರುತಿದೆ. ಎದ್ದು ಹೋಗಿರಿ ಇದ್ದ ನಿಂದಕರು) ಎಂದು ಹಾಡಿದರು. (ದೊರಕಿದಾ ಗುರು ದೊರಕಿದಾ ಪರಮಾನಂದ ಬೋಧದರವಿನೊಳಗೆ ಬಂದು ದೊರಕಿದಾ ಗುರು ದೊರಕಿದಾ) ಎಂದು ಗುರುಗಳ ಮೇಲೆ ಪದವನ್ನು ಕಟ್ಟಿ ಹಾಡಿದರು. ಗೋವಿಂದ ಭಟ್ಟರ ಸ್ಥಿತಿ ಅಸ್ತಮಾ ರೋಗದಿಂದ ಕಾಡುತ್ತಿತ್ತು. ಅವರು ತಮ್ಮ ಶರೀರ ಬಿಡುವ ಮೊದಲು ಶಿಷ್ಯರಲ್ಲಿ ಯಾರು ಟೊಳ್ಳು, ಯಾರು ಗಟ್ಟಿ ಅನ್ನುವದಕ್ಕೆ ಒಂದು ಪರೀಕ್ಷೆ ನಡೆಸಿದರು. ಗೋವಿಂದ ಭಟ್ಟರ ಪಾಲಿಗೆ ಬಂದ ಒಂದು ಮುರಕಮನೆ ಹರಕು ಚಾಪೆ, ಒಡಕ ಗಡಿಗೆ ಪರ್ಯಾಣ ಆಸ್ತಿಯನ್ನೂ ಹೊಡೆಯಬೇಕೆನ್ನುವ ಶಿಷ್ಯರೇ ಬಹಳ ಇದ್ದರು. ಈ ಮನಿ ಖಾಲಿ ಮಾಡ್ತೀನಿ ಶಿಷ್ಯರನ್ನು ಕರೆದು ಕೀಲಿಕೈ ಶರೀಫನ ಕೈಯಲ್ಲಿ ಕೊಡಬೇಕಾಗಿದೆ ಅವನು ಎಲ್ಲಿದ್ದಾನೆ. ಕರೆದು ತನ್ನಿರೋ ಅಂದರು. ಆದರೆ ಶಿಷ್ಯರಿಗೆ ಶರೀಫ ಬರಗೊಡಬಾರದು ಎನ್ನುವ ಮನಸ್ಸಿತ್ತು ಅದಕ್ಕೆ ಶಿಷ್ಯರು ಶರೀಫನನ್ನು ಎಲ್ಲ ಕಡೆಗೆ ಹುಡುಕಿದೆವು ಅವನು ಸಿಗಲಿಲ್ಲ. ಏನಾರ ಕೊಡುವದಿದ್ದರೆ ನಮಗೆ ಕೊಡಿರಿ ಎಂದು ಬೇಡಿದರು. ಕಡೆಗೆ ಗೋವಿಂದ ಭಟ್ಟರು ಶರೀಫ ಎಲ್ಲಿದ್ದಿ ಮನೆಗೆ ಬಾರೋ ಎಂದು ಕೂಗಿದರು. ಎರಗುಪ್ಪಿಯಲ್ಲಿ ದೊಡ್ಡಾಟ ಆಡುತ್ತಿದ್ದ ಶರೀಫರಿಗೆ ಗುರುಗಳ ಕರುಳಿನ ಕೂಗು ಕೇಳಿಸಿತು. ಶರೀಫರು ಓಡುತ್ತ ಬಂದರು. ಶರೀಫಾ ಹೋಗುತೈತಿ ಹಿಡಿ ಹಿಡಿ ಎಂದರು. ಒತ್ತಿ ಬರುವ ವಾಂತಿಯನ್ನು ಶರೀಫರು ಬೊಗಸೆಯಲ್ಲಿ ತೆಗೆದುಕೊಂಡರು ಯಾರು ತುಳಿಯದ ಜಾಗೆಯಲ್ಲಿ ಚಲ್ಲಲು ಹೇಳಿದರು. ಕೆಲ ಹೊತ್ತು ಯೋಚಿಸಿದರು. ತಮ್ಮ ಎದೆಯ ಅಂಗಳದಲ್ಲಿ ಯಾರೂ ಪಾದವಿಟ್ಟಿಲ್ಲ, ಅಲ್ಲಿಯೇ ಇದನ್ನು ಜೋಪಾನವಾಗಿ ಇಡಬೇಕೆಂದು ಗಟಗಟನೇ ಕುಡಿದರು. ಗುರುಗಳ ಕಫಾ ಅವರಿಗೆ ಕೃಪೆ ಆಗಿತ್ತು. ಇತರರಿಗೆ ಹೇಸಿಗೆ ಎನಿಸಿತು. ಸಂತಸಗೊಂಡ ಗುರುಗಳು ಶರೀಫನ ತೊಡೆಯ ಮೇಲೆ ದೇಹಬಿಟ್ಟರು. ಗುರುಗಳ ಆತ್ಮಾನಂದದ ಅಮೃತವನ್ನು ಹೃದಯದಲ್ಲಿ ತುಂಬಿಕೊಂಡಿದ್ದ ಅವರ ವಾಣಿ ಪ್ರಸಾದಿಕ ವಾಣಿ ಆಯಿತು. ಅವರು ತತ್ವಪದಗಳಿಗಾಗಿ ಎಲ್ಲಿ ಹುಡುಕಾಡಲಿಲ್ಲ. ಜೀವನದ ಹಾದಿಯಲ್ಲಿ ಸುಲಭವಾಗಿ ಸಾಮಾನ್ಯವಾಗಿ ಕಣ್ಣಿಗೆ ಬೀಳುವ ಸಾಮಾನ್ಯ ಸಂಗತಿಗಳೇ ಅವರ ಕವಿತ್ವಕ್ಕೆ ವಸ್ತುಗಳಾದವು. ಕುರಿ, ಕೋಳಿ ಪಾರಿವಾಳ ಗಿರಣಿ ಸಾಲಿ ಹಬ್ಬ ಹುಣ್ಣಿವೆ ಜಾತ್ರೆ ಅವುಗಳಲ್ಲಿ ಶರೀಫರು ಆಧ್ಯಾತ್ಮದ ಇರುವನ್ನು ತುಂಬಿದರು. ಜೀವನಕ್ಕೆ ಸುಗಮವಾದ ಹಾದಿ ತೋರಿಸಿದರು. ಅವು ಬರೀ ಹಾಡುಗಳಾಗಿರಲಿಲ್ಲ. ಆತ್ಮಾನಂದದ ಕೆನೆ ರಸಪಾಕ ಅಧರಕ್ಕೂ ಸಿಹಿ ಉದರಕ್ಕೂ ಸಿಹಿ. ಇಮಾಮ ಸಾಹೇಬರ ಮಗನಾಗಿ ಗುರು ಕರುಣೆಯಿಂದ ಗುರು ಕುಮಾರರಾಗಿ ನೆಲಲೋಕದಲ್ಲಿದ್ದರು, ದೇವಲೋಕದ ಅಪರೂಪದ ಬುಡ ಬುಡಕ್ಯಾ ಆಗಿದ್ದರು. ಸಂಸಾರದ ಸಂತೆಯಲ್ಲಿ ಪುಕ್ಕಟೆಯಾಗಿಟ್ಟ ದೈವಿ ನೇಕಾರರು, 70 ವರ್ಷದ ಆಯುಷ್ಯದುದ್ದಕ್ಕೂ ಪ್ರಾಪಂಚಿಕರಿಗೆ ಪಾರಮಾರ್ಥದ ಸುಖ ಉಣಿಸುತ್ತ ದಿ. 3-7-1889 ರಂದು ಸಂಜೆ 6 ಗಂಟೆಗೆ ಎಲ್ಲರನ್ನು ಕರೆದು ದೇಹ ಬಿಡತಿನಿ ದೇಹ ಬಿಡತಿನಿ ಎಂದು ಹಾಡುತ್ತ ಶಿವಪಾದವ ಸೇರಿದರು. ಅವರ ಶರೀರವನ್ನು ಭಕ್ತರು ಅವರ ತಂದೆ ತಾಯಿಯ ಸಮಾಧಿಯ ಬಳಿ ಮಲಗಿಸಿದರು. ಮಲಗಿದವರು ಸದಾ ಕಾಲಕ್ಕೂ ಎಚ್ಚೆತ್ತರು. ಇನ್ನೂವರೆಗೆ ಶರೀಫ ಗಿರಿಯ ಕ್ಷೇತ್ರದಲ್ಲಿ ಅವರ ಗದ್ದುಗೆ ಎಡ ಭಾಗದಲ್ಲಿ ಮಹಮ್ಮದಿಯರು ಸಕ್ಕರೆ ಓದಿಸಿದರೆ, ಹಿಂದುಗಳು ಬಲಭಾಗದಲ್ಲಿ ಕಾಯಿಯನ್ನು ಒಡೆದು ಅವರ ಭಕ್ತಿಯ ನಮನ ಮಾಡಿ, ಹಿಂದೂ ಮುಸ್ಲಿಮರೂ ಸೋದರರಂತೆ ಜಾತ್ಯಾತೀತ ನಿಲುವಿನ ನಾಡಿನಲ್ಲಿ ಒಂದು ಜೀವಂತ ನಿದರ್ಶನವಾಗಿದೆ. ಅಂಥ ಮಹಾತ್ಮರು ನಮ್ಮ ಕರ್ನಾಟಕದಲ್ಲಿ ಹುಟ್ಟಿದ್ದು ವೀರಶೈವ ಸಾಹಿತ್ಯ ತತ್ವವನ್ನು ಜನರಿಗೆ ಹಾಡಿ ರಂಜಿಸಿದ್ದು ನಮ್ಮ ಪುಣ್ಯ. ಅವರು ತೋರಿಸಿದ ದಾರಿಯಲ್ಲಿ ಸಾಗೋಣ.
ಲೇಖಕರು : ಶ್ರೀ ಬಸವರಾಜ ರಾಮಣ್ಣ ಮಳಲಿ, ಅಧ್ಯಕ್ಷರು, ಶ್ರೀ ಶರೀಫ ಶಿವಯೋಗಿ ಸಾಹಿತ್ಯ ಸಮಿತಿ, ಶಿಶುನಾಳ.
ಪ್ರಕಟಣೆ : ಶ್ರೀ ಶ್ರೋ.ಬ್ರ.ನಿ.ಸ. ಕಲ್ಮೇಶ್ವರ ಮರಿದೇವ ಮಂದಿರ
ಹಾಗೂ ಶ್ರೀ ಫಕ್ಕೀರೇಶ್ವರ ಧರ್ಮ ಪ್ರಚಾರಕ ಮಂಡಳಿ, ಗುಡಗೇರಿ.
ಶ್ರೀ ಶರೀಫ ಶಿವಯೋಗಿ ಮತ್ತು ಗುರು ಗೋವಿಂದ ಶಿವಯೋಗಿ
ಪಂಚಾಗ್ನಿಮಠ ಟ್ರಸ್ಟ್, ಶರೀಫಗಿರಿ-ಶಿಶುವಿನಹಾಳ
ತಾ|| ಶಿಗ್ಗಾಂವ, ಜಿಲ್ಲಾ-ಹಾವೇರಿ
ಮೊಬೈಲ್ : 8884518780
ಅಧ್ಯಕ್ಷರು,
ಶ್ರೀ ಶರೀಫ ಸಾಹಿತ್ಯ ಸಮೀತಿ
ಶಿಶುವಿನಹಾಳ, ತಾ. ಶಿಗ್ಗಾಂವ ಜಿ. ಹಾವೇರಿ.
ಅಧ್ಯಕ್ಷರು,
ಶ್ರೀ ಶ. ಶಿ. ಪಂಚಾಗ್ನಿಮಠ ಟ್ರಸ್ಟ ಹಾಗೂ ಧರ್ಮದರ್ಶಿಗಳು, ಶಿಶುನಾಳ ಹಾಗೂ ಸಕಲ ಸದ್ಭಕ್ತರು